Collection: ಸತೀಶ್ ಚಪ್ಪರಿಕೆ

ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ‘ಬ್ರಿಟಿಷ್ ಶಿವ್ನಿಂಗ್ ಸ್ಕಾಲರ್‌ಷಿಪ್’ ಪಡೆದ ಏಕೈಕ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸತೀಶ್ ಚಪ್ಪರಿಕೆ, ಲಂಡನ್‌ನ ವೆಸ್ಟ್ ಮಿನಿಸ್ಟರ್‍ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಉನ್ನತ ವ್ಯಾಸಂಗ ಮಾಡಿದ್ದಾರೆ. ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಚಪ್ಪರಿಕೆ ಎಂಬ ಕುಗ್ರಾಮಕ್ಕೆ ಸೇರಿದವರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಅವರು, ತಂದೆಯ ಹೊಟೇಲ್ ಉದ್ಯಮದ ಹಿನ್ನಲೆಯಲ್ಲಿ ಕ್ರಮೇಣ ಬೆಂಗಳೂರಿಗೆ ಬಂದು ನೆಲಸಿದವರು.

ಸಸ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೇವಲ ಬರವಣಿಗೆಯ ಶಕ್ತಿಯಿಂದಲೇ ‘ಪ್ರಜಾವಾಣಿ’ ದಿನಪತ್ರಿಕೆ ಸೇರಿ, ಅಲ್ಲಿ ಪತ್ರಕರ್ತ ಜೀವನ ಆರಂಭಿಸಿದರು. ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದ ನಂತರ ‘ಟಿವಿ೯’, ‘ದಿ ಸಂಡೆ ಇಂಡಿಯನ್’ ನಿಯತಕಾಲಿಕದ ಸಹಾಯಕ ಸಂಪಾದಕರಾಗಿದ್ದರು. ಅದಾದ ಮೇಲೆ ಒಂದು ವರ್ಷ ಕಾಲ ‘ಸಿಂಬಯಾಸಿಸ್ ವಿಶ್ವವಿದ್ಯಾಲಯ’ದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದರು. ನಂತರ ‘ವಿಆರ್‌ಎಲ್ ಮಿಡಿಯಾ’ ಸಂಸ್ಥೆಯ ಪ್ರಧಾನ ಸಂಪಾದಕರಾಗಿ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದ್ದರು. ಪತ್ರಿಕಾ ವ್ಯವಸಾಯಕ್ಕೆ ವಿದಾಯ ಹೇಳಿದ ಮೇಲೆ, ಆರು ವರ್ಷಗಳಿಂದ ಬೆಂಗಳೂರು ಮೂಲದ ಅಂತರ್ ರಾಷ್ಟ್ರೀಯ ಸಂಸ್ಥೆ ‘ಫರ್ಬೆಂಡನ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್’ನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ‘ಪ್ರಜಾವಾಣಿ’ ಮತ್ತು ‘ಹಫಿಂಗ್ಟನ್ ಪೋಸ್ಟ್’ (ಇಂಗ್ಲಿಷ್)ನಲ್ಲಿ ಅಂಕಣಗಳನ್ನು ಬರೆದಿದ್ದಾರೆ.

ಮೂರು ದಶಕಗಳ ಹಿಂದೆ ಹಿಂದೆ ‘ಪ್ರಜಾವಾಣಿ’ ದೀಪಾವಳಿ ಕಥಾ ಸ್ಪರ್ಧೆಗಳ ಮೂಲಕ ಬೆಳಕಿಗೆ ಬಂದ ಕತೆಗಾರರಾದ ಅವರ ‘ಮತ್ತೊಂದು ಮೌನಕಣಿವೆ’ (ಪರಿಸರ ಲೇಖನಗಳು=೧೯೯೭), ‘ಹಸಿರು ಹಾದಿ’ (ಅ.ನ.ಯಲ್ಲಪ್ಪ ರೆಡ್ಡಿ ಆತ್ಮಕತೆ-೧೯೯೯), ವಿಶ್ವಕಪ್ ಕ್ರಿಕೆಟ್ (ಕ್ರಿಕೆಟ್ ಕುರಿತಾದ ಕೃತಿ-೨೦೦೦), ಬೇರು (ಕಥಾ ಸಂಲಕನ-೨೦೦೨), ಥೇಮ್ಸ್ ತಟದ ತವಕ ತಲ್ಲಣ (ಪ್ರವಾಸ ಕಥನ-೨೦೦೯), ದೇವಕಾರು (ಜನಪರ ಲೇಖನಗಳ ಸಂಗ್ರಹ-೨೦೧೦), ಮುಸಾಫಿರ್ (ಅಂಕಣ ಬರಹಗಳ ಸಂಗ್ರಹ-೨೦೧೬) ಮತ್ತು ‘ಖಾಂಜಿ ಭಾಯ್’ (ಇಂಗ್ಲಿಷ್ ಕೃತಿ- ಆತ್ಮ ಚರಿತ್ರೆ ೨೦೧೯) ಕೃತಿಗಳು ಇದುವರೆಗೆ ಪ್ರಕಟವಾಗಿವೆ. ಈ ಪೈಕಿ ‘ಥೇಮ್ಸ್ ತಟದ ತವಕ ತಲ್ಲಣ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ. ಹದಿನೆಂಟು ವರ್ಷಗಳ ದೀರ್ಘ ಕಾಲದ ನಂತರ ಅವರ ಎರಡನೇ ಕಥಾ ಸಂಕಲನ ‘ವರ್ಜಿನ್ ಮೊಹಿತೊ’ (೨೦೨೦) ಕಳೆದ ವರ್ಷ ಪ್ರಕಟವಾಗಿದೆ. ಕೋವಿಡ್ ಆತಂಕದ ನಡುವೆಯೂ ಪ್ರಕಟವಾದ ಒಂದೇ ತಿಂಗಳಲ್ಲಿ ಎರಡನೇ ಮುದ್ರಣ ಕಂಡ ಕೃತಿ ‘ವರ್ಜಿನ್ ಮೊಹಿತೊ’.

ಈಗ ’ಮತ್ತೊಂದು ಮೌನ ಕಣಿವೆ’, ’ಹಸಿರು ಹಾದಿ’, ’ಬೇರು’, ’ಥೇಮ್ಸ್ ತಟದ ತವಕ ತಲ್ಲಣ’, ’ದೇವಕಾರು’, ’ಮುಸಾಫಿರ್‍-೧’, ’ಮುಸಾಫಿರ್- ೨’, ’ವರ್ಜಿನ್ ಮೊಹಿತೊ’ ಮತ್ತು ’ಸಂಚಲನ’ ’ಮೈಲಾಂಗ್ಸ್’ನಲ್ಲಿ ಇ-ಪುಸ್ತಕಗಳಾಗಿ ಪ್ರಕಟವಾಗಿವೆ.

ಜಾಗತಿಕ ನೆಲೆಯಲ್ಲಿ ಕನ್ನಡ ಸಾಹಿತ್ಯ ಲೋಕದ ಪ್ರತಿಬಿಂಬವಾಗಿ ಹೊರಹೊಮ್ಮಿರುವ ’ಬುಕ್ ಬ್ರಹ್ಮ’ ಡಿಜಿಟಲ್ ಮಾಧ್ಯಮ ಸಂಸ್ಥೆಯ ಸಂಸ್ಥಾಪಕರು ಸತೀಶ್ ಚಪ್ಪರಿಕೆ.

9 products

Sorry, there are no products in this collection