ಬೆಟ್ಟದ ಜೀವ

ಬೆಟ್ಟದ ಜೀವ

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ   

ಶಿವರಾಮ ಕಾರಂತರ ಬಗ್ಗೆ ಪರಿಚಯವೇ ಬೇಕಿಲ್ಲ… ಎಲ್ಲಾ ಸಾಹಿತ್ಯ ಪ್ರಿಯರಿಗೂ ಚಿರಪರಿಚಿತರು… ಅವರ ಅನೇಕ ಕೃತಿಗಳನ್ನು ಓದಿರುವವರೆ ಎಲ್ಲರೂ… ಬೆಟ್ಟದ ಜೀವವು ಸಹ ಬಹುಶಃ ಎಲ್ಲಾ ಪುಸ್ತಕ ಪ್ರೇಮಿಗಳು ಓದಿರುವಂತಹ ಕಾದಂಬರಿಯೇ…. ಬೆರಳೆಣಿಕೆಯಷ್ಟಿನವರು ಮಾತ್ರ ಈ ಕಾದಂಬರಿಯನ್ನು ಓದದೇ ಉಳಿದಿರಬಹುದು ಸಾಹಿತ್ಯಾಸ್ತಕರಲ್ಲಿ….

ಬೆಟ್ಟದ ಜೀವವು ಮಲೆನಾಡಿನ ಸುಬ್ರಮಣ್ಯ ಎಂಬ ಕಾಡಿನಲ್ಲಿ ಒಂದು ಹವ್ಯಕ ಸಂಸಾರದ ಮೇಲೆ ಆಧಾರಿತವಾಗಿದೆ… ಶಿವರಾಮರು ಸುಬ್ರಮಣ್ಯ ಕಾಡಿನಲ್ಲಿ ದಾರಿ ತಪ್ಪಿದಾಗ, ದಾರಿ ಹೋಕರ ಸಹಾಯದಿಂದ ಅವರಿಗೆ ಕಾಡಿನಲ್ಲಿರುವ ನಮ್ಮ ಚಿರಸ್ಮರಣೀಯ ಪಾತ್ರವಾದ ಗೋಪಾಲಯ್ಯನವರನ್ನು ಭೇಟಿಯಾಗುವ ಸುಸಮಯ ಒದಗುತ್ತದೆ… ಮೊದಲು ಪಾಪ ಅಷ್ಟೊಂದು ಆಯಾಸವಿರುವಾಗಲೇ ದಾರಿ ತಪ್ಪಿದರಲ್ಲಾ… ಎಂದೆನಿಸಿದರೂ, ತಪ್ಪಿದ್ದರಿಂದಲೇ ಗೋಪಾಲಯ್ಯನವರನ್ನು ಭೇಟಿಯಾಗಲು ಸಾಧ್ಯವಾಯಿತು ಎಂದು ಮನಸ್ಸಿಗೆ ನೆಮ್ಮದಿಯೆನಿಸುತ್ತದೆ… “ಆಗುವುದೆಲ್ಲಾ ಒಳ್ಳೆಯದಕ್ಕೆ….” ಎಂದು “ಶ್ರೀ ಕೃಷ್ಣ ಪರಮಾತ್ಮ”ನು ನುಡಿದಿರುವಂತೆ…


ಆ ಕಾಡಿನಲ್ಲಿ ಪಂಜ, ಕಾಟುಮೂಲೆ, ಮಲೆನಾಡಿನ ದಟ್ಟ ಹಸಿರಿನ ನಡುವೆ ಚೆಂದದ ತೋಟ ಮಾಡಿ, ತಮ್ಮದೇ ಆದ ಪ್ರಪಂಚ ಕಟ್ಟಿಕೊಂಡು ತುಂಬು ಜೀವನ ನಡೆಸುತ್ತಿರುವ ಗೋಪಾಲಯ್ಯ – ಶಂಕರಿ ಎಂಬ ಆ ವೃದ್ದ ದಂಪತಿಗಳ ಕಡೆಗೂ, ಅವರ ಪುಟ್ಟ ಪ್ರಪಂಚದ ಕಡೆಗೂ ಇದ್ದ ಆಸಕ್ತಿ ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ ಎಂಬಂತೆ ವರ್ಷಕ್ಕೆ ಒಂದು ಬಾರಿ ಓದಲೇಬೇಕೆಂಬ ಪುಸ್ತಕಗಳ ಸಾಲಿಗೆ ಇದುವೂ ಸೇರಿತು…


ಸುತ್ತಮುತ್ತ ದಟ್ಟ ಹಸಿರಿನ ಪರಿಸರವನ್ನೇ ತುಂಬಿರುವಲ್ಲಿ, ಎಪ್ಪತ್ತರ ಆಸುಪಾಸಿನಲ್ಲಿರುವ ಗೋಪಾಲಯ್ಯನವರ ಚೇತನ ಮತ್ತು ಹುಮ್ಮಸ್ಸು… ನಗರದಲ್ಲಿ, ಆಧುನಿಕ ಉಪಕರಣಗಳ ಬಳಕೆಯಲ್ಲಿರುವ ಮೂವತ್ತರ ಆಸುಪಾಸಿನಲ್ಲಿರುವ ನಮ್ಮಲ್ಲಿಲ್ಲದಿರುವುದೇ ಶೋಚನೀಯ…
ಕಾರಣ, ಇಂದು ಬದುಕನ್ನ ತಮ್ಮ ತಮ್ಮ ಸ್ವಂತ ಕಣ್ಣುಗಳಿಂದ ನೋಡಿಕೊಳ್ಳುವುದಕ್ಕಿಂತ ಹೆಚ್ಚಾಗಿ, ನಾಗರೀಕ, ನಗರ ಜೀವನದ ಪ್ರತಿಷ್ಠೆ, ಅಂತಸ್ತುಗಳ ದೃಷ್ಟಿಯಿಂದ ನೋಡಿ, ಕೊನೆಗೆ ಭ್ರಮನಿರಸನಗೊಳ್ಳುವವರೇ ಹೆಚ್ಚು; ಫಲಿತಾಂಶ ಬೇಗನೆ ದಣಿವು, ಬೇಗನೆ ಮುಪ್ಪು. ಇದು ಮುಖವಾಡದ ಬದುಕಿನ ಸ್ಥಿತಿ. ಹಾಗಾಗಿ, ಅಷ್ಟು ವಯಸ್ಸಾದರೂ, ದಣಿವಾಗದ ಗೋಪಾಲಯ್ಯನನ್ನು ಕಂಡರೆ ಜನರಿಗೆ ಅಚ್ಚರಿ, ಅಚ್ಚುಮೆಚ್ಚು.


ಒಮ್ಮೆ ಮಾತಿನಲ್ಲಿ “ನಿಮ್ಮಂಥ ಅತ್ತೆ – ಮಾವ ಸಿಕ್ಕಿ, ಕಾಟುಮೂಲೆಯಂತ ತೋಟ ಸಿಗುವುದಾದರೆ ನಾನು ಇಲ್ಲೇ ತಳವೂರಲು ಸಿದ್ದ” ಎಂದು ಶಿವರಾಮಯ್ಯ ಹೇಳಿದಾಗ, ಗೋಪಾಲಯ್ಯ ಹೀಗೆ ಹೇಳುತ್ತಾರೆ, “ಕಾಟುಮೂಲೆ ತೋಟ ನಾರಾಯಣನಿಗಾಯಿತು. ನೀವು ನಿಜವಾಗಲೂ ಇಲ್ಲೇ ಇರುವಿರಾದರೆ, ಕುಮಾರ ಪರ್ವತದ ಮೇಲೆ ನಿಮಗೆ ನಾನೇ ತೋಟವೊಂದನ್ನು ಮಾಡಿಕೊಡುತ್ತೇನೆ…. ” ಲೇಖಕರಂತೆ ನನಗೂ ಸಹ ಹಾಗೆಯೇ ಅನಿಸಿದ್ದು, ಈ ಮೊಬೈಲ್, ನಾಗರೀಕ ಜೀವನವೇ ಬೇಡ, ಅಂತ ಒಂದು ನಿರ್ಜನ ಪ್ರದೇಶಕ್ಕೆ ತೆರಳಿ ಬಿಡಬೇಕೆಂದು ಮನವು ಬಯಸಿತು… ಮರುಕ್ಷಣವೇ ಅದು ನನ್ನಿಂದ ಸಾಧ್ಯವಾ, ಎಂದು ಮರುಪ್ರಶ್ನೇ ಬರುತ್ತಲೇ… ನಂತರದ ಮನದ ಪ್ರತಿಕ್ರಿಯೆ… ನಿಶ್ಯಬ್ದ… ಸರಿ, ಅದು ನನ್ನಿಂದ ಸಾಧ್ಯವಾಗದ ಕೆಲಸವೆಂದೂ… ಸುಮ್ಮನೆ ಪುಸ್ತಕಗಳಲ್ಲಿ ಓದಿ ಆನಂದಿಸುವುದೇ ಒಳಿತೆಂದು ಸುಮ್ಮನಾದೆ…. ಆದರೆ ಗೋಪಾಲಯ್ಯನವರದ್ದೇ ಸೋಜಿಗ… ಆ ಇಳಿವಯಸ್ಸಿನಲ್ಲೂ ಕುಮಾರ ಪರ್ವತವನ್ನೇ ತೋಟವನ್ನಾಗಿಸುವೆ ಎಂದು ಎಷ್ಟು ಹುಮ್ಮಸ್ಸಿನಿಂದ ನುಡಿಯಲು ಯಾವ ಶಕ್ತಿ ಅವರಲ್ಲಿತ್ತೆಂದು…


ಅವರಿಗೆ ಇದ್ದ ಎರಡು ಮಕ್ಕಳ ಪೈಕಿ, ಮಗಳು ಬಾಣಂತನದ ಸಮಯದಲ್ಲಿ ಅವರನ್ನು ಬಿಟ್ಟು ಅಗಲಿದ್ದರೆ, ಆಸರೆಯಾಗಿ ನಿಲ್ಲಬೇಕಾದ ಮಗನಿಗೆ ಇಂಗ್ಲೀಷಿನ ವ್ಯಾಮೋಹವು ಹೆಚ್ಚಾಗಿ, ತಂದೆ – ತಾಯಿಯರನ್ನು ಬಿಟ್ಟು ಹೋಗಿದ್ದ, ಆ ವ್ಯಥೆ ಮನದಲ್ಲಿದ್ದರೂ ತನ್ನ ಮುದ್ದಿನ ಮಡದಿಗೆ ಅದನ್ನು ತೋರ್ಪಡಿಸದೆ ಸದಾ ಲವಲವಿಕೆಯಿಂದಲೂ, ಚುರುಕುತನದಿಂದಲೂ ಕಾಟೂ ಮೂಲೆಯ ನಾರಾಯಣನೊಡನೆಯೂ, ಅಳುಗಳೊಂದಿಗೂ ಹರಟುತ್ತಾ, ಅಡಿಕೆ ಕೀಳುವುದು, ಕಾಡು ಪ್ರಾಣಿಗಳ ಉಪದ್ರವವನ್ನು ನಿಭಾಯಿಸುವುದೆಂದು ತಮ್ಮ ದೇಹಕ್ಕೆ ಮುಪ್ಪಾಗಿರುವುದು, ತಮ್ಮ ಮನಸ್ಸಿಗಲ್ಲವೆಂದು ಸಾಬೀತು ಪಡಿಸಿದ್ದಾರೆ ಗೋಪಾಲಯ್ಯನವರು…


ದಿನನಿತ್ಯವೂ ಹಂಡೆಗೆ ಉರಿಯನ್ನು ಹಾಕಿ, ಎಣ್ಣೆಯನ್ನು ಹಚ್ಚಿ ಕೊಂಡೆ ಅಭ್ಯಂಜನ ಮಾಡುವುದು, ಹೊಟ್ಟೆ ತುಂಬಾ ಊಟ ಮಾಡುವುದು, ಮಡದಿಯನ್ನು ಕಿಟಲೇ ಮಾಡುವುದು, ನದಿಯನ್ನು ಕಂಡೊಡನೆ ಯುವಕನಂತೆ ನದಿಗಿಳಿದು ಮೀಯುವುದು, ಸರಸರನೆ ಆ ಕಾಡಿನಲ್ಲಿ ನಡೆದು ಕಾಟು ಮೂಲೆಯನ್ನು ತಲುಪುವುದು, ಹುಲಿಯನ್ನು ಭೇಟೆಯಾಡುವುದು, ತೋಟಕ್ಕೆ ನುಗ್ಗುವ ಆನೆಗಳನ್ನು ಓಡಿಸುವುದು… ಎಲ್ಲದಕ್ಕೂ ಇವರೆ ಮುಂದಾಳಾಗಿ ನಿಲ್ಲುವ ಇವರ ವ್ಯಕ್ತಿತ್ವವನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ…


ನಿರೂಪಕರ ಸ್ಥಾನದಲ್ಲಿ ನಾನೇ ಗೋಪಾಲಯ್ಯ, ಶಂಕರಿಯವರೊಡನೆ ಒಡನಾಡಿದ್ದೆನೆಂಬ ಭಾವನೆಯನ್ನು ಇಂದಿಗೂ ಹೊಂದುತ್ತಿರುವೆ…. ಒಟ್ಟಿನಲ್ಲಿ “ಬೆಟ್ಟದ ಜೀವ” ಎಲ್ಲರಿಗೂ ಮಾದರಿಯ “ಗಟ್ಟಿಗ ಜೀವ”…… ಆತ್ಮೀಯ ಗೋಪಾಲಯ್ಯನವರು ನನ್ನ ಮೆಚ್ಚಿನ ಪಾತ್ರಗಳಲ್ಲಿ ಮೊದಲಿಗರು….

 

ಧನ್ಯವಾದಗಳು
-ದೇವಿ ಶ್ರೀ ಪ್ರಸಾದ್

 

ಕೃಪೆ

https://pustakapremi.wordpress.com/

 

ಪುಟಗಳು: 156

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !