ಏಪ್ರಿಲ್ ಫೂಲ್

ಏಪ್ರಿಲ್ ಫೂಲ್

Regular price
$6.99
Sale price
$6.99
Regular price
Sold out
Unit price
per 
Shipping does not apply

ಬರಹಗಾರರು: ಹನುಮಂತ ಹಾಲಗೇರಿ

ಕಥೆಗಾರ ಸಹಜವಾಗಿ, ಅತಿಯಾದ ರೂಪಕ ಮತ್ತು ಸಂಕೇತಗಳ ಗೋಜಿಗೆ ಹೋಗದೆ, ಆಯಾ ಭೌಗೋಳಿಕ ಪರಿಸರದ ಗಟ್ಟಿ ಭಾಷೆ ಮತ್ತು ಜನಜೀವನದ ವಿವರಗಳೊಂದಿಗೆ ಕಟ್ಟಿಕೊಡುತ್ತ ಹೋಗುತ್ತಾರೆ. ಪುಸ್ತಕದ ಮೊದಲ ಕಥೆ ೨೧೨೦ ರ ಊಹಿತ ಅದಲು ಬದಲು ಲಿಂಗತಾರತಮ್ಯದ ಸನ್ನಿವೇಶವೊಂದರ ಮೂಲಕ ಲಘು ಹಾಸ್ಯದ ದಾಟಿಯಲ್ಲಿ ಬೆಳೆಯುತ್ತ, ಓದಿಸಿಕೊಂಡು ಹೋಗುವ ಕಥೆಯಾದರು ಅದು ಮಾಡುವ ಪರಿಣಾಮ ಮಾತ್ರ ಅಗಾಧವಾದುದು. ಇಂದಿನ ವ್ಯವಸ್ಥೆಗೆ ಕಪಾಳಮೋಕ್ಷದಂತಿರುವ 'ಏಪ್ರಿಲ್ ಫೂಲ್' ಅಷ್ಟರ ಮಟ್ಟಿಗೆ ಯಶಸ್ವಿ ಕಥೆ. 'ಅದು' ಕಥೆ ದಿನಬೆಳಗುವ ಸೂರ್ಯ ಮೇಲಿಂದಲೇ ಎಲ್ಲವನ್ನು ಗಮನಿಸುತ್ತಾ ಹೇಗೆ ಭೂಮಿಯ ಮನುಷ್ಯರು ಪ್ರಕೃತಿ ಸಹಜವಾದ ಕಾಮನೆ ಮತ್ತು ಲೈಂಗಿಕಾಭಿವ್ಯಕ್ತಿಗಳು ಅಸಹ್ಯವಾಗಿಸಿ , ಕೇವಲ 'ಅದು' ಆಗಿಸಿಕೊಂಡು, ಮನುಷ್ಯರ ಮೆದುಳನ್ನ ಕೊಳೆಸಿಕೊಂಡು ಜೀವವಿರೋಧಿಯಾಗಿಸಿ ಅನಾಹುತಗಳಿಗೆ ಕಾರಣವಾಗುತ್ತಾರೆ ಎಂಬುದನ್ನು ನಿರ್ಭಾವುಕತೆಯಿಂದ, ಅಂತರದಲ್ಲಿದ್ದುಕೊಂಡು, ವ್ಯಂಗ್ಯವಾಗಿ ಹೇಳುವ ಕಥೆ. ಇಂತಹ ಪ್ರತಿರೋಧದ ಕನ್ನಡಿ ಹಿಡಿಯುವ ಪ್ರಯೋಗ 'ಫಾರಿನ್ ಹೊಲೆಯ' ಕಥೆಯಲ್ಲೂ ಇದೆ. ಇಲ್ಲಿ ಒಬ್ಬ ವಿದೇಶಿ, ಭಾರತೀಯನೊಬ್ಬನ ನಂಬಿಕೆಗಳನ್ನು ಪ್ರಶ್ನಿಸಬಲ್ಲ, ಆತ್ಮವಿಮರ್ಶೆಗೊಳಿಸಲು ಪುಸಲಾಯಿಸುವ ಸಹಜ ಪ್ರಶ್ನೆಗಳನ್ನು ಕೇಳುತ್ತ ಹೋಗುತ್ತಾನೆ. 'ಫಾರಿನ್ ಹೊಲೆಯ' ಕಥೆ ನಮ್ಮ ಆಹಾರ ಸಂಸ್ಕೃತಿಯ ಹಲವು ಮಗ್ಗಲುಗಳ ಮತ್ತು ಅದರ ಸುತ್ತ ನಾವೇ ಹೆಣೆದುಕೊಂಡಿರುವ ನಮ್ಮದೇ ನಂಬಿಕೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಎಲ್ಲ ಹೇರಿಕೆಗಳನ್ನು ಮೀರಿದ, ಮೌಢ್ಯಗಳಿಂದ ದೂರವಾದ, ನಾವೆಲ್ಲರೂ ಬಹಳ ಜತನವಾಗಿ ಕಾಪಿಟ್ಟುಕೊಳ್ಳಬೇಕಾದ ನಮ್ಮ ಖಾಸಗಿ ಆಧ್ಯಾತ್ಮದ ಆವರಣದ ಬಗೆಗಿನ ಜಿಜ್ಞಾಸೆ ಮತ್ತು ಚರ್ಚೆ ಇಲ್ಲಿನ ಬಹುಪಾಲು ಕಥೆಗಳಲ್ಲಿ ಗುಪ್ತಗಾಮಿನಿಯಾಗಿ ಹರಿದಿರುವುದನ್ನು ಸಿದ್ಧಯ್ಯನ ಪವಾಡ, ಪ್ರೀತಿಗೆ ಸೋಲಿಲ್ಲ, ಸ್ಥಿತ ಪ್ರಜ್ಞತೆ ಮುಂತಾದ ಕಥೆಗಳಲ್ಲಿ ಕಾಣಬಹುದು. ಈ ಕಥಾಗುಚ್ಛದಲ್ಲಿರುವ ಚೂರು ಕತೆಗಳು ಬುಡ್ಡಿದೀಪದ ಬೆಳಕಿನಂತೆ ತೋರುತ್ತವೆ. ಪಿಡುಗು, ಗಂಡು ಜೋಗ್ಯಾ ಕಥೆಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಸುಖದುಃಖ ಹೋರಾಟಗಳನ್ನು ತೆರೆದಿಡುವ ಪ್ರಯತ್ನವಿದೆ. ಸ್ವರ್ಗ ಸಾಯುತ್ತಿದೆ, ಸುಡುಗಾಡು ಕಥೆಗಳಲ್ಲಿ ದನಿಯಿಲ್ಲದವರ, ಆದಿವಾಸಿಗಳ ಕಥೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ.

ಇಲ್ಲಿರುವ ಕೆಲವು ಸ್ತ್ರೀಕೇಂದ್ರಿತ ಕಥೆಗಳು ಯಥಾಸ್ಥಿತಿವಾದವನ್ನು ಕಾಪಿರಿಸುತ್ತವೆ ಎಂದೂ ಮತ್ತು ಕೆಲವು ಕಥೆಗಳು ಸಂದರ್ಭವನ್ನು ಅಲ್ಲಿಯೇ ನಿಂತು ಎದುರಿಸದೆ ತಮ್ಮ ಮನಸ್ಸಿನಲ್ಲಿ ಕನಸಿದ ಚೆಂದದ ಜಾಗೆಗೆ ವಿಮುಖ ಪ್ರಯಾಣ ನಡೆಸಿಬಿಡುತ್ತವೆ ಎಂದೂ 'ಮನೆ ಕಟ್ಟೋ ಆಟ' 'ಸ್ವರ್ಗ ಸಾಯುತ್ತಿದೆ' ಓದುವಾಗ ಅನಿಸಿದರೂ; ಅಲ್ಲಿನ ಪಾತ್ರಗಳು ಯಾವುದೇ ಕಪಟಗಳಿಲ್ಲದ ಒಂದು ಸುಂದರ, ಶುದ್ಧ ಮಾನವೀಯ ಪ್ರಪಂಚದೆಡೆಗೆ ತುಡಿಯುತ್ತವೆ ಎಂಬ ಸಮಜಾಯಿಷಿಯನ್ನು ಪಾತ್ರಗಳೇ ಕೊಡುವಷ್ಟು ಜಾಣ್ಮೆಯ ಕಥೆ ಕಟ್ಟುವಿಕೆಯನ್ನ ಕಥೆಗಾರರು ಬಳಸಿದ್ದಾರೆ. ಇಂತಹ ಚಿಕ್ಕ ತಕರಾರಿನಾಚೆಗೆ ಈ ಸಂಕಲನದಲ್ಲಿ ಮುನ್ನುಡಿಯಲ್ಲಿ ಹೇಳಿದಂತೆ ಬೇರೆಯವರು ಹೋಗಲು ಬಯಸದ ಸಾಹಿತ್ಯದ ಅತಿಸೂಕ್ಷ್ಮ ಮತಗಟ್ಟೆಗಳಿಗೆ ನಿರ್ಭಿಡೆಯಿಂದ ದಿಟ್ಟವಾಗಿ ಹಾಲಿಗೇರಿಯವರು ಹೋಗುತ್ತಿರುವುದು ಅವರ ಕಥಗಳ ವಸ್ತುವೈವಿಧ್ಯಗಳೇ ಹೇಳುತ್ತವೆ.