ಜಾರುವ ದಾರಿಯಲ್ಲಿ

ಜಾರುವ ದಾರಿಯಲ್ಲಿ

Regular price
$6.99
Sale price
$6.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ  

1952ರಲ್ಲಿ ಈ ಕಾದಂಬರಿ ಮೊದಲ ಮುದ್ರಣ ಕಂಡಿದೆ. ಈಗಾಗಲೇ ಗುರುತಿಸಿರುವಂತೆ, 1951ರಲ್ಲಿ “ಕುಡಿಯರ ಕೂಸು” ಮತ್ತು “ಚಿಗುರಿದ ಕನಸು” ಕಾದಂಬರಿಗಳು ಪ್ರಕಟವಾಗಿದ್ದವು. ಈ ಮೂರೂ ಕಾದಂಬರಿಗಳು – ಎರಡೇ ವರ್ಷಗಳ ಕಾಲಾವಧಿಯಲ್ಲಿ ಪ್ರಕಟವಾಗಿದ್ದರೂ ವಸ್ತು ಮತ್ತು ಅನುಭವ ಪ್ರಪಂಚ ಭಿನ್ನವಾದದ್ದು. ಕುಡಿಯರ ಕೂಸು, ಮಲೆ ಕುಡಿಯರ ಸಮಾಜವನ್ನು ಕುರಿತದ್ದು. ಚಿಗುರಿದ ಕನಸು, ಪಟ್ಟಣವಾಸದ ಹಿನ್ನೆಲೆಯುಳ್ಳ ಒಬ್ಬ ಆದರ್ಶವಾದಿ ತರುಣ, ದೇಶದ ರಾಜಧಾನಿಯಾದ ದಿಲ್ಲಿಯಿಂದ ಬಂದು ಕರಾವಳಿಯ ಗ್ರಾಮವೊಂದರಲ್ಲಿ ಬೇರುಗಳನ್ನು ಹುಡುಕುತ್ತಾ, ಕಾಡು ಭೂಮಿಯನ್ನು ಹಸನುಗೊಳಿಸಿ ವೈಜ್ಞಾನಿಕ ಬೇಸಾಯವನ್ನು ಜಾರಿಗೆ ತಂದ ಹೋರಾಟದ ಬದುಕನ್ನು ಕುರಿತದ್ದು. ಜಾರುವ ದಾರಿಯಲ್ಲಿ ಕಾದಂಬರಿ ಎರಡನೆಯ ಮಹಾಯುದ್ಧದ ಹಿನ್ನೆಲೆಯಲ್ಲಿ, ಕರಾವಳಿಯ ಕಾಡುಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ, ಗ್ರಾಮ ವಸತಿಗಳಲ್ಲಿ, ಜರುಗಿದ ಪಲ್ಲಟ, ಅರಣ್ಯಗಳ, ಕಾರ್ಮಿಕರ ವಲಸೆ, ಬದುಕು, ಬವಣೆಗಳನ್ನು ಕುರಿತದ್ದು. ಯುದ್ಧವು ತಂದ ಸಂಪತ್ತು, ಸಂಕಟಗಳ ದೆಸೆಯಿಂದಾಗಿ ಮನುಷ್ಯನ, ಸಮಾಜದ ಮೌಲ್ಯಗಳು, ಜೀವನ ಕಲ್ಪನೆಗಳಲ್ಲಿ ಆದ ಬದಲಾವಣೆಗಳನ್ನು ಒಬ್ಬ ಆದರ್ಶವಾದಿ ವೈದ್ಯನ ಸಾಂಸಾರಿಕ ಏಳುಬೀಳುಗಳ ಹಿನ್ನೆಲೆಯಲ್ಲಿ ಪರಿಶೀಲಿಸುವ ಪ್ರಯತ್ನವೂ ಇಲ್ಲಿದೆ. ಕಾರಂತರ ಕೃಷಿ ಜೀವನದ ಕಾದಂಬರಿಗಳ ಪಟ್ಟಿಗೆ ಈ ಕಾದಂಬರಿ ಸೇರುವುದಿಲ್ಲ. ವೃತ್ತಿ ಪ್ರಪಂಚ, ವ್ಯಾಪಾರ ಪ್ರಪಂಚ, ಕೂಲಿಕಾರರ ಜಗತ್ತು, ಈ ಕಾದಂಬರಿಯ ಪ್ರಧಾನ ಭೂಮಿಕೆ. ಶ್ರಮದ ಪರಿಕಲ್ಪನೆ ಬದಲಾದ ರೀತಿ, ಶ್ರಮಿಕರ ಜೀವನದ ಹೊಸ ಬವಣೆಗಳು ಕಾದಂಬರಿಯ ಒಂದು ಹಂತದಲ್ಲಿ ಕೇಂದ್ರದಲ್ಲಿವೆ. ಒಂದು ಕುಟುಂಬದ ಕತೆಯೂ ಇದೆ. ಕೂಲಿಕಾರರ ಶ್ರಮವಿನ್ಯಾಸ ಮಾತ್ರ ಈ ಜಗತ್ತಿನಲ್ಲಿ ಬದಲಾಗುವುದಿಲ್ಲ, ವೃತ್ತಿಯ ಬೇಕು-ಬೇಡಗಳು ಕೂಡ ಬದಲಾಗುತ್ತವೆ. ಹೀಗಾಗಿ ಕಾದಂಬರಿಗೆ ಬಹುಮುಖೀ ಆಯಾಮಗಳಿವೆ. ಹೀಗೆ ಮೂರು ಭಿನ್ನ ಅನುಭವ ವಲಯಗಳಿಗೆ ಸೇರಿದ ಕಾದಂಬರಿಗಳನ್ನು ಕಾರಂತರು ಎರಡೇ ವರ್ಷದ ಕಾಲಾವಧಿಯಲ್ಲಿ ಬರೆದಿರುವ ಸೃಜನಶೀಲ ಸೋಜಿಗವನ್ನು ಕೂಡ ಗಮನಿಸಬೇಕು.

ಗುಲಾಬಿಯ ಪಾತ್ರವನ್ನು ಮೊದಲಿಗೆ ಗಮನಿಸೋಣ. ಕನ್ನಡ ಕಾದಂಬರಿ ಪ್ರಪಂಚದಲ್ಲೇ ಇದೊಂದು ವಿಶಿಷ್ಟ ಪಾತ್ರ, ವಿಭಿನ್ನ ಮಾದರಿ. ಈಕೆ ಕಲಾವಂತರ ಕುಟುಂಬದವಳು. ಜೀವನದ ಒಂದು ಘಟ್ಟದ ತನಕ, ಕಲಾವಂತ ಕುಟುಂಬಗಳ ಬದುಕನ್ನೇ ಬದುಕಿದವಳು. ಸನ್ನಿವೇಶಗಳ ಒತ್ತಡ, ಆತ್ಮಪರಿವೀಕ್ಷಣೆ ಎರಡೂ ಸೇರಿ, ತನ್ನ ಹಿನ್ನೆಲೆಯನ್ನು, ಸ್ವಭಾವವನ್ನು ಮೀರಿದವಳು. ಹೊಸ ವ್ಯಕ್ತಿತ್ವ ಕಂಡುಕೊಂಡವಳು. ಆರ್ಥಿಕವಾಗಿ ಸಾಕಷ್ಟು ಸಂಪನ್ನವಾಗಿರುವ ಹಿನ್ನೆಲೆಯಿದ್ದು, ದಾದಿಯ ಕೆಲಸವನ್ನು ಆಯ್ಕೆ ಮಾಡಿಕೊಂಡವಳು. ಗಮನಿಸಬೇಕಾದ ಸಂಗತಿಯೆಂದರೆ, ಇದಕ್ಕೆ ಬೇಕಾದ ವೃತ್ತಿ ಶಿಕ್ಷಣವಾಗಲಿ, ತರಬೇತಿಯಾಗಲಿ ಆಕೆಗೆ ಇಲ್ಲ. ವೃತ್ತಿಶಿಕ್ಷಣ ಮಾತ್ರವಲ್ಲ, ಉಳಿದಂತೆ ಕೂಡ ಅವಳಿಗೆ ಓದು-ಬರಹ ಬರುತ್ತದೆ ಅನ್ನುವುದನ್ನು ಬಿಟ್ಟರೆ, ಶಾಲಾ-ಕಾಲೇಜು ಶಿಕ್ಷಣವಿಲ್ಲ. ಆದರೆ ದಾದಿಯ ವೃತ್ತಿಗೆ ಬೇಕಾದ ಸೇವಾ ತತ್ಪರತೆ, ಸಾಮಾಜಿಕ ಕಾಳಜಿ, ಬದ್ಧತೆಯೆಲ್ಲ ಇವೆ. ಕಾದಂಬರಿಯ ಕೊನೆಯ ಭಾಗದಲ್ಲಿ ಇಂದುಮತಿಗೆ ದೀರ್ಘಕಾಲದ ಶುಶ್ರೂಷೆ-ಚಿಕಿತ್ಸೆಗಾಗಿ ಒಂದು ಸುಸಜ್ಜಿತ ಆಧುನಿಕ ಬೃಹತ್ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂದಾಗ, ಗುಲಾಬಿಗೆ ಗೊತ್ತಾಗುತ್ತದೆ ತನಗೆ ವೃತ್ತಿ ಶಿಕ್ಷಣವಿಲ್ಲವೆಂದು, ತರಬೇತಿಯಿಲ್ಲವೆಂದು. ಆದರೆ ಈಕೆಯ ವ್ಯಕ್ತಿತ್ವ ವಿಕಸನಕ್ಕೆ, ಸೇವಾ ತತ್ಪರತೆಗೆ ಇವೆಲ್ಲ ಅಡ್ಡಿಯಾಗುವುದೇ ಇಲ್ಲ. ಕಾದಂಬರಿಯ ಅರ್ಧ ಭಾಗದ ನಂತರ, ಈಕೆಯ ಪಾತ್ರ, ಕಥನದಲ್ಲಿ ಮುನ್ನೆಲೆಗೆ ಬರುತ್ತದೆ. ಆದರೂ ಓದುಗರ ಮನಸ್ಸನ್ನು ಕಲಕುತ್ತದೆ, ಸಾವಕಾಶ ಆಕ್ರಮಿಸುತ್ತದೆ. ಈಕೆ ಕೂಡ ಯುದ್ಧವೇ ಕಾರಣವಾಗಿ ಸಮಾಜದಲ್ಲಿ, ವಾಸಿಸುತ್ತಿರುವ ಪಟ್ಟಣದಲ್ಲಿ ಜರುಗುವ ಸಕಲ ಪಲ್ಲಟಗಳ ಮಧ್ಯೆ ಬದುಕುತ್ತಿರುವವಳೇ. ಆದರೆ ಅವಳ ವ್ಯಕ್ತಿತ್ವ ವಿಕಸನವಾಗುವ ರೀತಿ ಅಪೂರ್ವವಾದದ್ದು. ಹಾಗೆ ನೋಡಿದರೆ, ಈಕೆಯೇನೂ ಘೋಷಿತ ಆದರ್ಶವಾದಿಯಲ್ಲ, ಸಮಾಜ ಸುಧಾರಕಿಯಲ್ಲ. ಸಾಮಾನ್ಯ ವ್ಯಕ್ತಿತ್ವ, ಆದರೆ ಸಾಕ್ಷಾತ್ಕಾರ ಕಂಡುಕೊಂಡವಳು. ಪ್ರಧಾನ ಪಾತ್ರ, ಪ್ರಧಾನ ಭೂಮಿಕೆಯಿಂದಾಚೆಗೂ ಬೆಳಗುವ ಮುಖ್ಯವಾದ ಆಯಾಮವೊಂದು ಈ ಪಾತ್ರದ ಮೂಲಕ ಪ್ರಕಟವಾಗುವುದರಿಂದಲೂ ಕಾದಂಬರಿ ವಿಶಿಷ್ಟವಾಗಿದೆ.

 

ಕೃಪೆ

https://ruthumana.com/2020/09/24/k-satyanarayana-jaruva-dariyalli/

 

ಪುಟಗಳು: 392

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !